ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ ,
ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂದು ಇವನನ್ನು ಮತ್ತೂ ಉದ್ವಿಗ್ನಗೊಳಿಸುತ್ತಿದೆ. ಗುನುಗುತ್ತಾ ಮೈಮರೆತು ಕಾರು ಓಡಿಸುತ್ತಿದ್ದಾನೆ. ಆಗಲೇ….. ಎದುರಿನಿಂದ ರಭಸವಾಗಿ ಹರಿದು ಬರುತ್ತಿರುವ ಲಾರಿಯನ್ನು ಇವನು ನೋಡಿದ್ದು ತಕ್ಷಣ ಕಾರನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಆಗ ರಸ್ತೆಯಂಚಿನಲ್ಲಿ ನಿಧಾನಕ್ಕೆ ಸಾಗಿದ್ದ ಸೈಕಲ್ ಸವಾರನ ಮೇಲೆ ಇವನ ಕಾರು ಹರಿದು ಮುಂದೆ ಹೋಗುತ್ತದೆ. ಆ ಚೀರಿದವನ ಆರ್ತನಾದ ಕರುಳು ಬಿರಿಯುವಂತೆ ಕೇಳಿಬರುತ್ತದೆ.

ಕ್ಷಣಕಾಲ ಇವನಿಗೆ ದಿಗ್ಬ್ರಾಂತಿ ಛೇ. ಇದೇನಾಗಿಹೋಯ್ತು. ತಾನು ಡ್ರೈವಿಂಗ್ ಕಲಿತ ದಿನದಿಂದ ಒಂದೂ ಅಪಘಾತ ಮಾಡಿಲ್ಲ. ಈಗ…. ಈಗ ತಾನೇನು
ಮಾಡಲಿ? ಹಿಂತಿರುಗಿ ಹೋಗಿ ಏನಾಗಿದೆ ನೋಡಲೇ ? ಅವನು ಬದುಕಿದ್ದಾನೋ ಸತ್ತಿದ್ದಾನೋ? ಅವನು ಬದುಕಿದ್ದರೆ ಅವನನ್ನು ಈಗ ಉಳಿಸುವ ಹೊಣೆ ತನ್ನದಲ್ಲವೇ? ಅಥವಾ ಸತ್ತಿದ್ದರೆ ? ಅದಕ್ಕೂ ತಾನೆ ಜವಾಬ್ದಾರ ! ಒಂದು ಮನಸ್ಸು ಹೀಗೆ ಯೋಚಿಸಿದರೆ, ಇನ್ನೊಂದು ಮನಸ್ಸು ಈ ರಾತ್ರಿಯಲ್ಲಿ ನನ್ನ ಕಾರಿನಿಂದ ಈ ಅಪಘಾತವನ್ನು ಯಾರು ನೋಡಿರುತ್ತಾರೆ ? ಏನೂ ಆಗಿಯೇ ಇಲ್ಲವೆಂಬಂತೆ ಮನೆಗೆ ಹೋಗಿ ನಿದ್ರಿಸಿಬಿಟ್ಟರೆ ಯಾರಿಗೆ ಗೊತ್ತಾಗುತ್ತದೆ ? ಈ ರಾತ್ರಿಯಲ್ಲಿ ನಾನೇ ಅಪಘಾತ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಯಾರಿದ್ದಾರೆ ? ಎಂದು ಯೋಚಿಸುತ್ತದೆ. ಆದರೆ….ನಿಜ ನಾನು ಸೈಕಲ್ಲಿನವನಿಗೆ ಢಿಕ್ಕಿ ಹೊಡೆದುದನ್ನು ನೋಡಿದ ಸಾಕ್ಷಿಗಳ್ಯಾರೂ ಇಲ್ಲ. ಹಾಗೆಂದು ಅದು ಅಪರಾಧವೇ ಅಲ್ಲವೇ ? ಯಾವ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ನನ್ನ ಮನಸ್ಸಾಕ್ಷಿ ಇದೆಯಲ್ಲವೇ ? ಆಗ ತಾನು ಬದಕಿದ್ದರೂ ಸತ್ತಂತೆ ತಾನೇ ? ಅದಕ್ಕೆ ಬದಲು ನಾನು ಮಾಡಿದ ಈ ತಪ್ಪನ್ನು ಒಪ್ಪಿಕೊಂಡು ಬಂದುದನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಧರ್ಮವಲ್ಲವೇ? ಇಂತಹುದೇ ಮಾನವ-ದಾನವ ಚಿಂತನೆಗಳಂದ ಅವನ ಮನ ಕೆಲ ಹೊತ್ತು ಹೊಯ್ದಾಡುತ್ತದೆ.

ಕೊನೆಗೂ ಅವನ ಮನದಲ್ಲಿದ್ದ ಮಾನವ, ದಾನವನನ್ನು ಮೆಟ್ಟಿ ಗೆಲ್ಲುತ್ತಾನೆ. ಅವನು ಕಾರನ್ನು ಹಿಂತಿರುಗಿಸಿಕೊಳ್ಳುತ್ತಾನೆ. ಅವನಿಗೆ ಈಗ ಯಾವ ಭಯ, ಗೊಂದಲವೂ ಇಲ್ಲ.  ಸತ್ಯದ ಹಾದಿಯಲ್ಲಿದ್ದೇನೆ.  ಮಾಡಿದ ಪಾಪಕ್ಕೆ ತಾನೇ ಹೊಣೆ ಎಂದರಿತು ಪರಿಸ್ಥಿತಿ ಎದುರಿಸಲು ತಯಾರಾಗಿದ್ದಾನೆ. ಬಂದುದೆಲ್ಲವ ಎದುರಿಸುತ್ತೇನೆ ಎಂದುಕೊಳ್ಳುತ್ತಾನೆ. ಕಾರು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಸೈಕಲ್ ಸವಾರನ ಎದುರು ನಿಲ್ಲುತ್ತದೆ. ಅದರಿಂದ ಇಳಿದ ಇವನು ಅವಸರದಿಂದ ಅವನೆಡೆಗೆ ಸಾಗಿ ಅವನನ್ನೆತ್ತಲು ಕೈ ಮುಂದೆ ಚಾಚುತ್ತಾನೆ. ಮತ್ತು…..

ಸಖಿ, ನಿನಗೂ ದಾನವನನ್ನು ಮೆಟ್ಟಿ ಮಾನವ ಗೆದ್ದ ಯಾವುದೋ ಘಟನೆ ನೆನಪಾದಂತಿದೆ ? ನನಗೂ ಹೇಳುತ್ತೀಯ ತಾನೇ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಷ್-ಪುಲ್
Next post ಕೂಸು ಎಲ್ಲಿ ಹೋಯಿತೇ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys